Monday, February 23, 2015

H1 N1 ಹಂದಿಜ್ವರ (Swine influenza)




ಹಂದಿಜ್ವರ (Swine influenza) ಒಬ್ಬರಿಂದೊಬ್ಬರಿಗೆ ಹರಡುವ ಮಾರಕ ರೋಗವಾಗಿದೆ. ಸಾಮಾನ್ಯವಾಗಿ ಕೊಳಕಾಗಿರುವ ಹಂದಿಗಳ ಶ್ವಾಸನಳಿಕೆಯಲ್ಲಿ ಬೆಳೆಯುವ ಈ ರೋಗಕ್ಕೆ ಕಾರಣವಾದ ವೈರಸ್ಸುಗಳು ಶೀಘ್ರವಾಗಿ ವಂಶಾಭಿವೃದ್ಧಿಗೊಂಡು ನೀರಿನ ಅಥವಾ ಆಹಾರವಾಗಿ ಮನುಷ್ಯರ ದೇಹ ಸೇರುತ್ತದೆ. ಮನುಷ್ಯರಲ್ಲಿ ಹಂದಿಯ ಹೊರತಾಗಿಯೂ ಈ ವೈರಸ್ಸು ದೇಹವನ್ನು ಪ್ರವೇಶಿಸಬಹುದು, ಇದಕ್ಕೆ ಪರ್ಯಾಯ ಕಾರಣಗಳಿರಬಹುದು. ಒಮ್ಮೆ ವೈರಸ್ಸು ದೇಹ ಹೊಕ್ಕಿದ ಬಳಿಕ ಕೆಮ್ಮು, ಸುಸ್ತು, ವಾಂತಿ, ವಾಕರಿಕೆ, ಜ್ವರ, ಅತಿಸಾರ, ಮೈಕೈನೋವು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ರೋಗಿಯ ಸೀನಿನ ತುಂತುರು, ಜೊಲ್ಲು ಮೊದಲಾದವುಗಳ ಮೂಲಕ ಗಾಳಿಯನ್ನು ಸೇರಿ ಇನ್ನೊಬ್ಬರಿಗೆ ಹರಡುತ್ತದೆ. ಈ ವೈರಸ್ ಧಾಳಿಯಿಟ್ಟ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಸ್ಪರ್ಶಿಸುವ ವಸ್ತುಗಳನ್ನು (ಕಟಕಟೆ, ಬಾಗಿಲ ಚಿಲಕ ಮೊದಲಾದವು) ಸ್ಪರ್ಶಿಸುವವರೂ ವೈರಸ್ಸಿನ ಧಾಳಿಗೆ ತುತ್ತಾಗಬಹುದು. ಇದನ್ನು ಬುಡಸಹಿತ ನಿರ್ನಾಮ ಮಾಡಲು ಸಂಶೋಧನೆಗಳು ನಡೆಯುತ್ತಿವೆ. ಆದರೂ ಎಲ್ಲರೂ ಈ ಬಗ್ಗೆ ಜಾಗರೂಕರಾಗಿರುವುದು ಅತ್ಯಂತ ಅಗತ್ಯವಾಗಿದೆ. ಸಂತೋಷದ ವಿಷಯವೆಂದರೆ ಇಂದು ಈ ಜ್ವರಕ್ಕೆ ಮದ್ದು ಲಭ್ಯವಿದೆ

ಆಯುರ್ವೇದದಲ್ಲಿ ಈ ಜ್ವರವನ್ನು ವಾತ ಕಫಜ ಜ್ವರ ಎಂದು ಕರೆಯಲಾಗಿದೆ. ದೇಹದ ವಾತ (ವಾಯು) ಮತ್ತು ಕಫ (ನೀರು) ದ ಅಂಶಗಳು ಬಾಧಿತವಾಗಿರುವುದರಿಂದ ಈ ಹೆಸರನ್ನು ಸೂಚಿಸಲಾಗಿದೆ. ಇದು ನಮ್ಮ ಶ್ವಾಸವ್ಯವಸ್ಥೆಯ ಮೇಲೆ ಧಾಳಿಯಿಟ್ಟು ಗಾಳಿಯಾಡುವ ಕೊಳವೆಗಳಲ್ಲಿ ನಿರಾಳವಾಗಿ ಗಾಳಿಯಾಡದಂತೆ ತಡೆಯೊಡ್ಡುತ್ತದೆ. ಇದರಿಂದ ಕೆಮ್ಮು, ಸುಸ್ತು, ಮೈ ಕೈ ನೋವು ಮೊದಲಾದ ತೊಂದರೆಗಳು ಕಂಡುಬರುತ್ತದೆ.

ತುಳಸಿ ಎಲೆಗಳು:
 ಪ್ರತಿದಿನ ಬೆಳಿಗ್ಗೆ ಚೆನ್ನಾಗಿ ತೊಳೆದ ಐದು ಪೂರ್ಣಗಾತ್ರದ ತುಳಸಿ ಎಲೆಗಳನ್ನು ಹಸಿಯಾಗಿ ಜಗಿದು ನುಂಗಿರಿ (ಚಿಕ್ಕದಾದರೆ ಏಳರಿಂದ ಎಂಟು ಎಲೆಗಳು). ಚೆನ್ನಾಗಿ ನೀರಾಗುವವರೆಗೆ ಅಗಿಯುವುದು ಅಗತ್ಯ. ತುಳಸಿ ಎಲೆಗಳು ಹಲವು ಕಾಯಿಲೆಗಳಿಗೆ ಉತ್ತಮ ಚಿಕಿತ್ಸಕವಾಗಿದೆ. ಈ ಎಲೆಗಳನ್ನು ನುಂಗುವುದರಿಂದ ಶ್ವಾಸಕೋಶಗಳು ಶುದ್ಧಿಯಾಗುವುದು ಮತ್ತು ಶ್ವಾಸನಳಿಕೆಯಲ್ಲಿ ವೈರಸ್ಸಿನಿಂದ ಸೋಂಕು ಉಂಟಾಗಿದ್ದರೆ ಅದನ್ನು ನಿವಾರಿಸಲು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು.

ಅಮೃತಬಳ್ಳಿ (Giloi - ವೈಜ್ಞಾನಿಕ ಹೆಸರುTinospora cordifolia):
ಹಂದಿಜ್ವರಕ್ಕೆ ಅಮೃತಬಳ್ಳಿಯೂ ಉತ್ತಮ ಮತ್ತು ಪರಿಣಾಮಕಾರಿಯಾದ ಔಷಧಿಯಾಗಿದೆ. ಈ ಬಳ್ಳಿಯ ಸುಮಾರು ಒಂದು ಅಡಿ ಉದ್ದವನ್ನು ಕತ್ತರಿಸಿಕೊಂಡು ನೀರಿನಲ್ಲಿ ಬೇಯಿಸಿ. ಈ ನೀರಿಗೆ ಐದರಿಂದ ಆರು ತುಳಸಿ ಎಲೆಗಳನ್ನು ಸೇರಿಸಿ. ಸುಮಾರು ಇಪ್ಪತ್ತು ನಿಮಿಷಗಳ ಕುದಿಯುವಿಕೆಯ ಬಳಿಕ ಎಲೆ ತನ್ನ ಸಾರವನ್ನೆಲ್ಲಾ ನೀರಿನಲ್ಲಿ ಬಿಡುತ್ತದೆ. ಈ ನೀರಿಗೆ ಹಿಮಾಲಯದ ಸೇಂಧಾ ಉಪ್ಪು (ಹಿಮಾಲಯದ ಕೆಂಪು ಕಲ್ಲುಪ್ಪು), ಕೆಲವು ಕಾಳು ಕಾಳುಮೆಣಸು, ಕಪ್ಪು ಉಪ್ಪು (black salt), ಕಲ್ಲುಸಕ್ಕರೆಯ ಚಿಕ್ಕ ತುಂಡು ಹಾಕಿ ಕದಡಿ ಹಾಗೇ ಬಿಡಿ. ಸ್ವಲ್ಪ ತಣಿದ ಬಳಿಕ ಈ ನೀರನ್ನು ಸೋಸಿ ಉಗುರುಬೆಚ್ಚಗಿರುವಂತೆಯೇ ಕುಡಿಯಿರಿ. ಇದು ವೈರಸ್ ದಾಳಿಗೂ ಉತ್ತಮವಾಗಿದೆ ಹಾಗೂ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಒಂದು ವೇಳೆ ಹಸಿ ಅಮೃತಬಳ್ಳಿಯ ಎಲೆಗಳು ಸಿಗದೇ ಇದ್ದರೆ ಆಯುರ್ವೇದ ಅಂಗಡಿಗಳಲ್ಲಿ ಒಣ ಎಲೆಗಳ ಪುಡಿಯೂ ಸಿಗುತ್ತದೆ. ಈ ದ್ರವವನ್ನು ಪ್ರತಿದಿನ ಒಂದು ಲೋಟ ಕುಡಿಯಬೇಕು. ರಾತ್ರಿ ಮಲಗುವ ಮುನ್ನ ಸೇವಿಸಿದರೆ ಉತ್ತಮ. Show Thumbnail 

ಕರ್ಪೂರ :
ಒಂದು ಚಿಕ್ಕ ಗುಳಿಗೆಯ ಗಾತ್ರದ ಕರ್ಪೂರವನ್ನು ನೀರಿನಲ್ಲಿ ಕದಡಿ ಕರಗಿದ ಬಳಿಕ ಕುಡಿಯುವುದೂ ಹಂದಿಜ್ವರಕ್ಕೆ ಉತ್ತಮ ಚಿಕಿತ್ಸೆಯಾಗಿದೆ. ಆದರೆ ಇದರ ಪ್ರಮಾಣ ತಿಂಗಳಿಗೆ ಒಂದು ಲೋಟ ಮಾತ್ರ. ಜ್ವರ ಹೆಚ್ಚಿದ್ದರೆ ತಿಂಗಳಿಗೆ ಎರಡು ಲೋಟ ಕುಡಿಯಬಹುದು. ಮಕ್ಕಳಿಗೆ ನೀಡುವುದಾದರೆ ಬೇಯಿಸಿದ ಆಲುಗಡ್ಡೆಯಲ್ಲಿ ಕರ್ಪೂರವನ್ನು ಪುಡಿಮಾಡಿ ಮಿಶ್ರಣಮಾಡಿ ನೀಡಬಹುದು. ಮಕ್ಕಳಿಗೆ ಒಂದು ಬಿಲ್ಲೆಯ ಕಾಲರಿಂದ ಅರ್ಧಭಾಗದಷ್ಟು ಮಾತ್ರ ನೀಡಬೇಕು.

ಬೆಳ್ಳುಳ್ಳಿ:
 ಜ್ವರವಿದ್ದಾಗ ಬೆಳಿಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಉಗುರುಬೆಚ್ಚನೆಯ ನೀರಿನೊಂದಿಗೆ ಸೇವಿಸಬೇಕು. ಇದರಿಂದ ವೈರಸ್ಸುಗಳ ಮೇಲೆ ಧಾಳಿಯಾಗಿ ಜ್ವರ ಕಡಿಮೆಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಉಗುರುಬೆಚ್ಚನೆ ಬಿಸಿಯಾದ ಹಸುವಿನ ಹಾಲು:
 ಜ್ವರವಿದ್ದಾಗ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರುಬೆಚ್ಚನೆಯ ಹಾಲಿನಲ್ಲಿ ಅರ್ಧ ಚಿಕ್ಕಚಮಚ ಹಳದಿಪುಡಿಯನ್ನು ಸೇರಿಸಿ ಕುಡಿಯುವುದರಿಂದಲೂ ಉತ್ತಮ ಪರಿಣಾಮ ಪಡೆಯಬಹುದು.

ಲೋಳೆಸರ:
 ಲೋಳೆಸರದ ಕೋಡೊಂದನ್ನು ಮುರಿದು ಅದರಿಂದ ಒಸರುವ ಲೋಳೆಯನ್ನು ಸಂಗ್ರಹಿಸಿ. ವಾಸನಾರಹಿತವಾದ ಈ ಲೋಳೆಯನ್ನು ಒಂದು ಲೋಟಕ್ಕೆ ಒಂದು ಚಮಚದಷ್ಟು ಪ್ರಮಾಣದಲ್ಲಿ ತಣ್ಣನೆಯ ನೀರಿನಲ್ಲಿ ಕದಡಿ ದಿನಕ್ಕೊಂದು ಲೋಟ ಕುಡಿಯಿರಿ. ಇದರಿಂದ ಬರೆಯ ಜ್ವರ ಕಡಿಮೆಯಾಗುವುದು ಮಾತ್ರವಲ್ಲ, ದೇಹದ ಇತರ ತೊಂದರೆಗಳಾದ ಮೂಳೆಗಂಟು ನೋವು, ಮೈಕೈ ನೋವು ಮೊದಲಾದವುಗಳೂ ಕಡಿಮೆಯಾಗುತ್ತದೆ. ಚರ್ಮದ ಕಾಂತಿ ಹೆಚ್ಚುತ್ತದೆ. ಜೊತೆಗೇ ದೇಹದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಕಹಿಬೇವು:
 ಕಹಿಬೇವಿನ ಮರ ಮನೆಯ ಬಳಿ ಇದ್ದರೆ ನೀವು ಸೇವಿಸುವ ಗಾಳಿ ಸ್ವಚ್ಛವಾಗಿರುತ್ತದೆ. ಈ ಗಾಳಿ ವಾಯುವಿನ ಮೂಲಕ ತೇಲಿ ಬರುವ ವೈರಸ್ಸುಗಳನ್ನು ಹೊಡೆದೋಡಿಸುತ್ತದೆ. ಕಹಿಬೇವಿನ ನಾಲ್ಕೈದು ಎಲೆಗಳನ್ನು ಪ್ರತಿದಿನ ಜಗಿದು ಸೇವಿಸುವುದರಿಂದ ರಕ್ತಶುದ್ಧಿಯಾಗುತ್ತದೆ ಹಾಗೂ ದೇಹ ಜ್ವರದ ವಿರುದ್ಧ ಸೆಣೆಸಲು ಹೆಚ್ಚು ಸಬಲವಾಗುತ್ತದೆ.

ವಿಟಮಿನ್ ಸಿ:
 ವಿಟಮಿನ್ ಸಿ ಹೆಚ್ಚಿರುವ ನೆಲ್ಲಿಕಾಯಿ, ಕಿತ್ತಳೆ, ಮೂಸಂಬಿ ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸಿ. ಅದರಲ್ಲಿಯೂ ನೆಲ್ಲಿಕಾಯಿ ಫ್ಲೂ ಜ್ವರಕ್ಕೆ ಅತ್ಯುತ್ತಮವಾಗಿದೆ. ಆದರೆ ವರ್ಷದ ಎಲ್ಲಾ ಕಾಲದಲ್ಲಿ ನೆಲ್ಲಿಕಾಯಿ ಲಭ್ಯವಿಲ್ಲದಿರುವುದರಿಂದ ಸಿದ್ಧರೂಪದಲ್ಲಿ ಸಿಗುವ ನೆಲ್ಲಿಕಾಯಿಯ ರಸವನ್ನು ಸಹಾ ಸೇವಿಸಬಹುದು.

ಪ್ರತಿದಿನದ ಪ್ರಾಣಾಯಾಮ:
 ಜ್ವರವಿದ್ದಾಗಲೂ ಬೆಳಿಗ್ಗೆ ನಡಿಗೆ ಅಥವಾ ನಿಧಾನಗತಿಯ ಓಟದ ಮೂಲಕ ನಿಮ್ಮ ಶ್ವಾಸಕೋಶ, ಗಂಟಲು ಮತ್ತು ಶ್ವಾಸನಾಳಗಳನ್ನು ಉತ್ತಮ ಸ್ಥಿತಿಯಲ್ಲಿರಿಸಬಹುದು. ಜೊತೆಗೆ ಪ್ರಾಣಾಯಾಮವನ್ನೂ ಅನುಸರಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದು ಮತ್ತು ವೈರಸ್ಸುಗಳ ವಿರುದ್ಧ ಹೋರಾಡಲು ದೇಹ ಶಕ್ತವಾಗುತ್ತದೆ. ಉತ್ತಮ ದೇಹದಾರ್ಢ್ಯತೆಯನ್ನು ಕಾಪಾಡಿಕೊಳ್ಳುವ ಜೊತೆಗೇ ಗಾಳಿಯ ಮೂಲಕ ಹರಡುವ (ಹಂದಿಜ್ವರದ ವೈರಸ್ ಸಹಿತ) ರೋಗಗಳು ಸುಲಭವಾಗಿ ದೇಹ ಬಾಧೆಗೊಳಗಾಗದಂತೆ ರಕ್ಷಿಸುತ್ತದೆ.

ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಹಂದಿಜ್ವರ ಸಾರ್ವಜನಿಕ ಸ್ಥಳಗಳಲ್ಲಿ ಇತರರಿಂದ ನಿಮಗೆ ಬರಬಹುದಾದ ಸಾಧ್ಯತೆ ಅತ್ಯಂತ ಹೆಚ್ಚಾಗಿರುವುದರಿಂದ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಸಾರ್ವಜನಿಕ ಸ್ಥಳಗಳಲ್ಲಿ ಏನನ್ನು ಸ್ಪರ್ಶಿಸಿದರೂ ಸೋಪು (ಅಥವಾ hand sanitizer) ಉಪಯೋಗಿಸಿ ಕೈ ತೊಳೆಯದೇ ಆಹಾರ ವಸ್ತುಗಳನ್ನಾಗಲೀ ನಿಮ್ಮ ಮೂಗು ಬಾಯಿ ಗಳನ್ನಾಗಲೀ ಮುಟ್ಟಬೇಡಿ. ಸೋಪಿನಿಂದ ತೊಳೆದುಕೊಳ್ಳುವುದಾದರೆ ಕಾಟಾಚಾರಕ್ಕೆ ತೊಳೆದಂತೆ ಮಾಡಬೇಡಿ, ಸುಮಾರು ಇಪ್ಪತ್ತು ಸೆಕೆಂಡುಗಳ ಕಾಲ ಎರಡೂ ಹಸ್ತಗಳು ಸೋಪಿನಿಂದ ಸಂಪೂರ್ಣವಾಗಿ ಆವರಿಸುವಂತೆ ತೊಳೆದುಕೊಳ್ಳಿರಿ. ಸಾರ್ವಜನಿಕ ಸ್ಥಳದಲ್ಲಿ ಓಡಾಡುವಾಗ ಸಾಧ್ಯವಾದರೆ ಮಾಸ್ಕ್ ಧರಿಸಿ.ಯಾವುದೇ ಆಹಾರವಸ್ತುಗಳನ್ನು ಕೈತೊಳೆಯದೇ ಮುಟ್ಟಬೇಡಿ. ಈ ಜ್ವರ ಇರುವ ಸ್ಥಳಗಳಲ್ಲಿ ತೆರೆದ ಸ್ಥಳಗಳಲ್ಲಿ ಮಾರಾಟಕ್ಕಿಟ್ಟ ಆಹಾರವಸ್ತುಗಳನ್ನು ಖರೀದಿಸಬೇಡಿ. ಪ್ರತಿದಿನವೂ ಸ್ವಚ್ಛಗೊಂಡಿರುವ ಬಟ್ಟೆಗಳನ್ನೇ ತೊಡಿರಿ, ಕೊಳೆಬಟ್ಟೆಗಳನ್ನು ಬಿಸಿನೀರು ಉಪಯೋಗಿಸಿಯೇ ಒಗೆಯಿರಿ. ನಿಮ್ಮ ಸುತ್ತ ಮುತ್ತ ನೈರ್ಮಲ್ಯವನ್ನು ಸಾಧ್ಯವಿದ್ದಷ್ಟು ಹೆಚ್ಚು ಪಾಲಿಸಿ.